ಎಲ್ಲಿ ಹೋಯಿತು ನಮ್ಮ ಕಲ್ಪನೆಗಳು........................


ಮೊನ್ನೆ ಭಾನುವಾರ ಬಹಳ ದಿನಗಳಾದ ಮೇಲೆ ಆರಾಮಾಗಿ ಕೂತು ಸಿನಿಮಾ ನೋಡುವುದಕ್ಕೆ  ಸಮಯ ಸಿಕ್ಕಿತು. ಹೊರಗಡೆ ಮಳೆಯ ವಾತಾವರಣ, ಮೈ ಕೊರೆಯುವ ಚಳಿ. ಬೆಚ್ಚಗೆ ಹೊದ್ದು ಚಾನೆಲ್ ಹುಡುಕಿದಾಗ ಡಾ. ರಾಜ್ ಅಭಿನಯದ "ಮಯೂರ" ಸಿನಿಮಾ ಶುರುವಾಗಲಿದ್ದದ್ದು ನೋಡಿ ಮನಸ್ಸಿಗೆ ಆದ ಸಂತೋಷ ಹೇಳ ತೀರದು.
ಚಿಕ್ಕ ಮಕ್ಕಳಿದ್ದಾಗ ದೂರದರ್ಶನದಲ್ಲಿ ಅಪರೂಪಕ್ಕೆ ಹಾಕುತ್ತಿದ್ದ ಒಳ್ಳೆ ಚಿತ್ರಗಳಲ್ಲಿ ಇದು ಕೂಡ ಒಂದಾಗಿತ್ತು. ಆಗ ಬಾಯಿ ಬಿಟ್ಟುಕೊಂಡು ನೋಡಿದ ನೆನಪು ಬಂತು.
ಆ ಸಿನಿಮಾದಲ್ಲಿ ಒಂದು ದೃಶ್ಯ...... ಕೊನೆಯ ರಾಜಕುಮಾರ ಕುದುರೆಯಿಂದ ಬಿದ್ದಾಗ ಮಯೂರ ಅವರನ್ನು ನೋಡಲು ತಾನು ಕದ್ದು ಮುಚ್ಚಿ ಕೂತ ಮರದ ಮೇಲಿಂದ ಇಳಿದು ಬರುತ್ತಾನೆ. ಆಗ ವಜ್ರಮುನಿ ಅಲ್ಲಿಗೆ ಬಂದು ಡಾ.ರಾಜ್‍ರವರನ್ನು ಏನು ಮಾಡುತ್ತಿದ್ದೀಯಾ ಅಂತ ಪ್ರಶ್ನಿಸುತ್ತಾರೆ. ಅವರು ಉತ್ತರಿಸದಿದ್ದಾಗ ಗಟ್ಟಿಯಾಗಿ ವಜ್ರಮುನಿ ಹೇಳುತ್ತಾರೆ "ಅರಸುಮಗ ಕೇಳುತ್ತಿದ್ದೇನೆ, ಕ್ಕೆಕೆರಿಸಿಕೊಂಡು ನೋಡುತ್ತೀಯಾ" ಅಂತ. ಆಹಾ ಎಂಥ ರೋಷ ಉಕ್ಕಿಸುವ ಮಾತುಗಳು ಎಷ್ಟು ಚೆನ್ನಾಗಿ ಹೇಳಿದ್ದಾರೆ ವಜ್ರಮುನಿಯವರು. ಚಿಕ್ಕವರಿದ್ದಾಗ ನಮಗೆ ಅಲ್ಲಿ ಹೋಗಿ ವಜ್ರಮುನಿಗೆ ಒಂದು ಗೂಸ ಕೊಟ್ಟು ಬರಬೇಕು ಅನ್ನುವಷ್ಟು ಸಿಟ್ಟು ಬರುತ್ತಿತ್ತು. ಆದರೆ ಇಂದು ಈ ದೃಷ್ಯ ನೋಡಿದಾಗ ಮನದಲ್ಲಿ ಮೂಡಿದ ಮೊದಲ ಭಾವನೆ, "ಅರೆ ಅವನ್ಯಾಕೆ ಏನು ಮಾತಾಡದೆ ನಿಂತಿದ್ದಾನೆ, ಹಾಗೆ ಸಿಟ್ಟು ಮಾಡಿಕೊಳ್ಳುವ ಬದಲು, ತಾನು ಏನು ಮಾಡುತ್ತಿದ್ದೇನೆ ಅಂತ ವಿವರಿಸಿ ಬಗೆಹರಿಸಬಾರದೆ" ಅಂತ.
ತಕ್ಷಣ ಅಂದುಕೊಂಡೆ ಎಂಥ ಸಿನಿಕಲ್ ಆಗಿ ಮಾತಾಡ್ತಾತಿದ್ದೀನಿ ಅಂತ. ಒಂದು ಕಾಲದಲ್ಲಿ ಇಂಥ ಸಿನಿಮಾಗಳನ್ನು ನೋಡುತ್ತಿದ್ದರೆ ನಮಗೂ ರೋಷ, ಹುಮ್ಮಸ್ಸು, ಭಕ್ತಿ ಎಲ್ಲಾ ಉಕ್ಕಿ ಬರ್ತಿತ್ತು. ಈಗ ಪ್ರತಿ ಕಾಲ್ಪನಿಕ ಕಥೆಯಲ್ಲು, ಅದು ಸಿನಿಮಾ, ನಾಟಕ ಕೊನೆಗೆ ಪುಸ್ತಕದಲ್ಲಿನ ಕಥೆಯೆ ಆಗಲಿ, ಅದರಲ್ಲಿ ನಾವು ವಾಸ್ತವಿಕತೆಯನ್ನು ಹುಡುಕುತ್ತು ಆ ಕಾಲ್ಪನೆಯ ಚಿತ್ರವಧೆ ಮಾಡುತ್ತೇವೆ ಅಂತ.
ಎಲ್ಲಿ ಹೋಯಿತು ನಮ್ಮ ಕಲ್ಪನೆಗಳು, ಹೀರೂ ನೂರು ಜನರನ್ನು ಹೋಡೆದಾಡುವಾಗ ಆಗುತ್ತಿದ್ದ ರೋಮಾಂಚನ, ಎಲ್ಲಿ ಆಗಲಿ ಅನ್ಯಾಯ ಜರಗುವ ಮುನ್ನವೆ ನುಗ್ಗಿ ಎಲ್ಲರನ್ನು ಕಾಪಾಡುವುದನ್ನು ನೋಡುವಾಗ ಆಗುತ್ತಿದ್ದ ಸಮಾಧಾನ, ಅವನಲ್ಲಿನ ಪ್ರಾಮಾಣಿಕತೆ, ನಿಷ್ಠೆ ನೋಡಿ ನಮ್ಮಲ್ಲೂ ಈ ಗುಣಗಳು ಇರಬೇಕು ಎನ್ನುವ ಬಯಕೆ, ಪ್ರೀತಿಯ ನಾಯಕಿಯೊಂದಿಗೆ ನೆಡೆಯುತ್ತಿದ್ದ ಸಲ್ಲಾಪ ನೋಡಿ ಉಕ್ಕುತ್ತಿದ್ದ ಹೃದಯ ರಾಗಗಳು....
ಜೀವನವನ್ನು ಅರಿಯುವ ಹೋರಾಟದಲ್ಲಿ, ನಾವು ಜೀವನದ ಸೌಂದರ್ಯವನ್ನೇ ನೋಡುವುದನ್ನು ಮರೆತಿದ್ದೇವೆ ಅನಿಸುತ್ತೆ. ಕಲ್ಪನೆಗಳನ್ನು ಕಲ್ಪನೆಗಳನ್ನಾಗಿ ತೆಗೆದುಕೊಳ್ಳದೆ ಅದನ್ನು ಜೀವಂತ ಮಾಡುವ ಹುಮ್ಮಸ್ಸಿನಲ್ಲಿ ಅದನ್ನು ಚೂರು ಚೂರಾಗಿ ಹಂಚಿ ಛಿದ್ರಗೊಳಿಸುತ್ತಿದ್ದೆವೇನೊ ಅನಿಸುತ್ತೆ.
ಮಕ್ಕಳು ಕಾರ್ಟೂನ್ ನೋಡಿ ನಕ್ಕು ನಲಿಯುವ ದೃಷ್ಯ ಕಂಡರೆ ಈರ್ಶ್ಯೆಯಾಗುತ್ತೆ. ಮುದ್ದು ಮಕ್ಕಳ ನಗುವುದನ್ನು ಮರೆಯದಿರಿ, ಎಲ್ಲಾ ರೂಪದಲ್ಲಿ ಸೌಂದರ್ಯವನ್ನು ಹುಡುಕಿ ನಲಿಯುವುದನ್ನು ಮರೆಯದಿರಿ, ಎಷ್ಟು ದೊಡ್ಡವರಾದರು ಕಲ್ಪನೆಯ ಶಕ್ತಿಯನ್ನು ಮರೆಯದಿರಿ ಎನ್ನಬೇಕು ಅನಿಸುತ್ತೆ.  
ಚಿಕ್ಕವರಿದ್ದಾಗ, ಚಂದಾಮಾಮಾದಲ್ಲಿ ಬರುತ್ತಿದ್ದ ವಿಕ್ರಮ್ ಬೇತಾಲ್ ಕಥೆಗಳು, ಪಂಚತಂತ್ರ, ಅನುಪಮ ನಿರಂಜನ ಅವರು ಬರೆದ ದಿನಕ್ಕೊಂದು ಕಥೆ... ಇದೆಲ್ಲಾ ಓದುವಾಗ ಕಣ್ಣಿಲ್ಲಿ ಒಂದು ಹೊಳಪು, ನಮ್ಮ ಸುತ್ತ ಬೆಳೆಸಿಕೊಂಡ ನಮ್ಮ ಕಲ್ಪನಾ ಪ್ರಪಂಚ ಮೈ ಮರೆಸುವಂತಿತ್ತು. ಆದರೆ ಇವತ್ತು ಮಗನಿಗೆ ದಿನಕ್ಕೊಂದು ಕಥೆ ಪುಸ್ತಕದಲ್ಲಿ ಒಂದು ಕಥೆ ಓದಿ ಹೇಳುವಾಗ, "ಅರೆ, ಈ ಕಥೆ ವಿಚಿತ್ರವಾಗಿದಿಯಲ್ಲ, ಇದರ ಅಂತ್ಯ ಸರಿಯಿಲ್ಲ, ಇದು ಮಕ್ಕಳಿಗೆ ಅರ್ಥವಾಗೊಲ್ಲ..." ಹೀಗೆ ನೂರೆಂಟು ಕೊಂಕು ಕಣ್ಣಿಗೆ ಕಾಣುತ್ತೆ.
ಮೊದಲೆಲ್ಲ ಸ್ನೇಹತರೊಂದಿಗೆ ನಗೆ, ನಲಿವು, ಹಾಸ್ಯ ಹಂಚಿಕೊಳ್ಳುವುದೆ ತುಂಬಾ ಮುಖ್ಯವಾಗಿತ್ತು, ದುಃಖವೇನಿದ್ದರು ನಮ್ಮೊಳಗೆ ಅಥವ ತೀರ ಹತ್ತಿರದ ಸ್ನೇಹತರೊಂದಿಗೆ. ಆದರೆ ಇಂದು ಫೋನ್ ಮಾಡಿದ ಕೂಡಲೆ ಶುರುವಾಗುತ್ತೆ ನಮ್ಮ ದುಃಖಗಳ ಪಟ್ಟಿ..
ಎಲ್ಲಿ ಹೋಯಿತು ಆ ಚಿಕ್ಕ ವಿಷಯಕ್ಕು ಸಂಭ್ರಮ ಪಡುವ ಗುಣ, ಎಲ್ಲಾ ವಸ್ತುವಲ್ಲೂ ನಗುವನ್ನು ಹುಡುಕುವ ಕಲೆ, ಕಣ್ಣಿನಲ್ಲಿ ಕನಸು ಕಾಣುವ ಹುಮ್ಮಸ್ಸು, ಮನಸ್ಸಿನಲ್ಲಿ ಪ್ರೀತಿಯ ಹೊಳೆ...
ಜವಾಬ್ದಾರಿಯನ್ನು ಮರೆತು ಬರಿ ಖುಷಿಯನ್ನು ಹುಡುಕಬೇಕೆಂದಲ್ಲ, ಆದರೆ ನಮ್ಮ ಜೀವನದ ಹಾದಿಯ ತುಂಬ ನೋವಿನೊಂದಿಗೆ ಸ್ವಲ್ಪ ನಲಿವನ್ನು ತುಂಬಿಕೊಳ್ಳಬೇಕೆಂಬ ಬಯಕೆ ಇರಲಿ. ಪ್ರತಿ ಹೆಜ್ಜೆಯನ್ನು ಗಂಭೀರವಾಗ ತೆಗೆದುಕೊಳ್ಳಬೇಕು ಸರಿ, ಆದರೆ ಆ ಗಾಂಭೀರ್ಯದಲ್ಲೂ ಒಂದು ಮಜವಿರಲಿ. ನಾವು ಹುಡುಕುತ್ತಿರುವ ದೂರದ ಬೆಟ್ಟ ನಮ್ಮ ಕೈಗೆಟುಕಿದ ಮೇಲೆ, ಹಿಂತಿರುಗಿ ನೋಡಿದಾಗ, ಬಂದ ಹಾದಿಯಲ್ಲಿ ಬರಿ ಮುಳ್ಳುಗಳ ಮಾತ್ರ ಕಾಣಬಾರದು, ಅಲ್ಲಲ್ಲಿ ಹೂವಿನ ಸುಗಂಧವು ಇರಲಿ.
ಮಕ್ಕಳಿಗೆ ಒಂದು ಮಾದರಿಯಾಗಬೇಕು ಅಂತ ಯೋಚಿಸುತ್ತೇವೆ, ಆದರೆ ಸರಿಯಾಗಿ ನೋಡಿದರೆ ನಾವು ಅವರನ್ನು ನೋಡಿ ಕಲಿಯಬೇಕು. ಮತ್ತೆ ಜೀವಿಸುವುದನ್ನು, ನಗುವುದನ್ನು, ನಲಿಯುವುದನ್ನು, ಪ್ರೀತಿಸುವುದನ್ನು.  

ಕಾಮೆಂಟ್‌ಗಳು

  1. tumba chennaagideyamma lekhana.nimminda innusshtu lekhanagalannu eduru noduttiddene.shubhavaagali.

    ಪ್ರತ್ಯುತ್ತರಅಳಿಸಿ
  2. ನಿವಿ..ಇಂತಹುದೇ ಒಂದು ವಿಷಯದ ಮೇಲೆ ಬರೆಯಬೇಕೆಂದು ಆಸೆಯಿತ್ತು...ಈಗ ಅನ್ನಿಸ್ತಿದೆ ಬರೆಯದೇ ಇದ್ದದ್ದೇ ಒಳ್ಳೆಯದಾಯಿತು ಅಂತ. ಬಹುಶಃ ನಿಮ್ಮಷ್ಟು ಸುಂದರ ಭಾವ ಅನಾವರಣ ನನ್ನಿಂದ ಆಗ್ತಿತ್ತೋ ಇಲ್ಲವೋ... ಸಿನಿಮಾ ಎಂದರೆ ನನಗೆ ಈಗಲೂ ಹಲವೊಮ್ಮೆ ಕೆಟ್ಟದ್ದನ್ನು ನೊಡೀದಾಗ ಛೇ ಹೀಗೇಕೆ ಮಾಡುತ್ತಿಲ್ಲ, ಅಲ್ಲೇ ಇದೆಯಲ್ಲ ಅವಳು ಬಿಸಾಕಿದ ವಿಷದ ಖಾಲಿ ಸೀಸೆ..??!!! ಅದನ್ನು ನೋಡಬಾರದಾ..!! ಅಯ್ಯೋ ಹೀಗೇಕೆ ಹೊಡೆವ ಖಳರ ಕತ್ತಿಯನ್ನು ಅವರ ಕೈಯಿಂದ ಕಿತ್ತು ಬಿಸಾಡಿದ...ಅದನ್ನೇ ಹಿಡಿದು ಈಗ ಹೋರಾಡುತ್ತಿರುವ ಶಕ್ತಿಯಲ್ಲಿ ಅರ್ಧ ಖರ್ಚು ಮಾಡಿದ್ದರೂ ಎಲ್ಲರನ್ನೂ ಕೊಚ್ಚಿ ಹಾಕಬಹುದಿತ್ತು..ಅಥವಾ ನಾಯಕನ ಕೈಲಿ ಕೊಲೆ ಆಗಬಾರದು ಎಂದಿದ್ದರೆ ಕೈಗೆ ಕಾಲಿಗೆ ಹೊಡೆದು ಬೀಳಿಸಬಹುದಿತ್ತು ...ಇತ್ಯಾದಿ... ಹೌದು!! ನಾವು ದೈನಂದಿನ ಎಷ್ಟೋ ವಿಷಯಗಳಲ್ಲಿ ರಸಮಯ ಕ್ಷಣಗಳನ್ನು ಅಸ್ವಾದಿಸುವುದಿರಲಿ ಗುರುತಿಸಲೂ ಅಶಕ್ತ ಅಗುತ್ತೇವೆ ಏಕೆ..?? ಒತ್ತಡಗಳು ಪೂರ್ವಾಗ್ರಹ ಪೀಡಿತ ಮನಸ್ಸು ಕಾರಣವಿರಬಹುದೇ.. ಚನ್ನಾಗಿದೆ ಮಂಥನ ..ನಿವಿ. ಇಷ್ಟ ಆಯ್ತು.

    ಪ್ರತ್ಯುತ್ತರಅಳಿಸಿ
  3. ಯಾಕೋ ನಾವು ಇಲ್ಲದ್ದನ್ನು ಲೇಪಿಸಿಕೊಂಡು ನಟಿಸಿಬಿಡುತ್ತಿದ್ದೇವೆನೋ ಅನಿಸುತ್ತದೆ! ನಮ್ಮಂತೆ ನಾವಿರದೆ ಸುತ್ತಮುತ್ತಲನೂ ನೆಮ್ಮದಿಯಾಗಿಡದೆ ಪಿರಿಪಿರಿ ಮಾಡಿಕೊಳ್ಳುತ್ತೇವೆ. ಏಳು ಸುತ್ತಿನ ಕೋಟೆಯ ಈ ಗೀತೆ ನಮಗೆ ಒಪ್ಪುತ್ತದೆ "ನಿನ್ನಿಂದ ಸುಖವಿಲ್ಲ, ನಿನ್ನೊಳಗೂ ಸುಖವಿಲ್ಲ" :(

    ಒಳ್ಳೆಯ ಮನೋ ಚಿಕಿತ್ಸಕ ಲೇಖನ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. nammannu naavu arithukondare, yaavude mucchu mareillade oppikondare... namage ellaa thilidanthe antha namma thande helthidru... adu eevaga estu satya antha gothagtha ide ... thanks for reading :)

      ಅಳಿಸಿ
  4. ಲತೆ ಬಳುಕಿ ಬೆಳೆದರೆ ಚೆನ್ನ.. ಮರ ನೆಟ್ಟಗಿದ್ದರೆ ಚೆನ್ನ ಇವರೆಡು ಅದಲು ಬದಲಾದರೆ... ಆಹಾ!
    ನಗಬೇಕಾದರೆ ಮಗುವಾಗಬೇಕು ಎನ್ನುತ್ತದೆ ಹಿತ ನುಡಿ. ಬರಿ ತಾರ್ಕಿಕ ಲೋಕದಲ್ಲಿ ವಿಹರಿಸಿ ಎಲ್ಲವನ್ನೂ ತರ್ಕದ ತಳಹದಿಯ ಮೇಲೆ ನೋಡುತ್ತಾ ನಮ್ಮ ತನವನ್ನು, ನಗುವ ಸದಾವಕಾಶವನ್ನು ಕಳೆದುಕೊಳ್ಳುತ್ತಿದ್ದೇವೆ. ಅಯ್ಯೋ ಅವನೆಲ್ಲಿ ಹೊಡೆಯುತ್ತಿದ್ದಾನೆ.. ಅವರು ಹೊಡೆಸಿಕೊಳ್ಳುತ್ತಿದ್ದಾರೆ ಅಷ್ಟೇ.. ಹೊಟ್ಟೆಗೆ ಬೆನ್ನಿಗೆ ಕೈಗೆ ಕಾಲಿಗೆ ಹಗ್ಗ ಕಟ್ಟುಕೊಂಡಿದ್ದಾರೆ ಅದಕ್ಕೆ ಫೈಟ್ ಮಾಡೋದು.. ದೇವಸ್ಥಾನದಲ್ಲಿ ಬರಿ ಮೋಸ, ಅದೇ ತುಳಸಿಹಾರ, ಅದೇ ಹೂವು ಮತ್ತೆ ಮಾತೆ ವಾಪಸ್ ಬರುತ್ತೆ.. ಹುಂಡಿಗೆ ದುಡ್ಡು ಹಾಕಿದರೆ ಪೂಜಾರಿ ಹೊಡೆಯುತ್ತಾನೆ ಹೀಗೆ ಯಾವುದರಲ್ಲಿಯೂ ನಂಬಿಕೆ ಇಲ್ಲದೆ ವಿಕ್ರಮ್ ನ ಬೇತಾಳದ ತರಹ ಸಂತಸ ಪಡದೆ.. ನೇತಾಡುತ್ತಾ ಇರುತ್ತೇವೆ.

    ಸೊಗಸಾದ ಬರಹ. ಕಲ್ಪನೆಗಳು ಬೇಕು.. ಕಲ್ಪನೆ ಇಲ್ಲದೆ ಲೋಕವಿಲ್ಲ.. ಆ ಆಶಯಗಳನ್ನು ಗುರುತಿಸುವ ಒಂದು ಸುಂದರ ಲೇಖನ ನಿವಿ ಸ್ಪೆಷಲ್ ನಲ್ಲಿ ಮೂಡಿ ಬಂದಿದೆ.

    (ರಾಜ್-ವಜ್ರಮುನಿ, ರಾಜ್=ತೂಗುದೀಪ ಶ್ರೀನಿವಾಸ್, ರಾಜ್-ನಾಗಪ್ಪ, ರಾಜ್-ಎಂಪಿ ಶಂಕರ್ ಇವರ ಜುಗಲ್ ಬಂದಿಗಳು, ರಾಜ್ ಚಿತ್ರದ ಹೈ ಲೈಟ್ಸ.. )

    ಪ್ರತ್ಯುತ್ತರಅಳಿಸಿ
  5. ಪ್ರಾಯಷ ನಮ್ಮ ಜವಾಬ್ದಾರಿಯ ಹೊರೆ ದೈನಂದಿನ ಒತ್ತಡ ಗಳು ನಮ್ಮನ್ನು ಆ ಮಟ್ಟಿಗೆ ಕುಂಡ ದ ಸಸಿಯಾಗಿ ಮಾಡಿಬಿಟ್ಟಿವೆ ಅನ್ನಿಸುತ್ತೆ. ಈಗಿನ ಧಾವಂತದ ಯುಗವೂ ಅದಕ್ಕೆ ಇಂಬು ಕೊಟ್ಟಿದೆ, ಚೆನ್ನಾಗಿ ಹೇಳಿದಿರಿ ಇನ್ನು ಪುನಃ ಮೊದಲಿಂದ ಶುರು ಮಾಡಬೇಕು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು